ಪ್ರಸಾರ : ೧೨ ಜೂನ್ ೨೦೦೯, ಶುಕ್ರವಾರ
ಹೊಸಮನೆ ಸದಾನಂದ ತನ್ನ ಕುತ್ತಿಗೆಯನ್ನ ತಾನೇ ಹಿಸುಕಿಕೊಳ್ಳಲು ಆರಂಭಿಸುತ್ತಾನೆ. ಎಲ್ಲರೂ ಬೆರಗಾಗುತ್ತಾರೆ. ಅಲ್ಲಿದ್ದ ಜೈಲರ್ ಮತ್ತು ಇತರರು ಹೊಸಮನೆ ಸದಾನಂದನನ್ನು ಬಿಡಿಸುತ್ತಾರೆ. ಹೊಸಮನೆಯು ಹುಚ್ಚನಂತೆ ಮತ್ತೆ ಅಡಿಗರ ’ಕೂಪಮಂಡೂಕ’ ಪದ್ಯದ ಸಾಲುಗಳನ್ನು ಹೇಳುವಾಗ ಪೂರ್ವಿ ಅಲ್ಲಿ ನಿಲ್ಲಲಾಗದೆ ಹೊರಡುತ್ತಾಳೆ. ಸುಕನ್ಯಾ ಅವಳ ಹಿಂದೆ ಹೋಗಲಾಗದಂತೆ ಹೊಸಮನೆ ಸದಾನಂದ ಅವಳನ್ನು ಕರೆದು ಮಾತಾಡಿಸುತ್ತಾನೆ. ಸಂದರ್ಶಕರ ಕೊಠಡಿಯ ಒಂದು ಮೂಲೆಯಲ್ಲಿ ಕುಸಿದು ಕೂತು ಗೊಣಗುತ್ತಾನೆ.
ಹತಾಶಳಾಗಿ ಮನೆಗೆ ಬರುವ ಪೂರ್ವಿಗೆ ಮೇಘಾ ಫೋನ್ ಮಾಡುತ್ತಾಳೆ. ಹೇಗಿತ್ತು ತಾಯಿಯೊಡನೆ ಹೋಗಿದ್ದ ಪ್ರವಾಸ ಎನ್ನುತ್ತಾಳೆ. ಪೂರ್ವಿಯು ಜೈಲಿನಲ್ಲಿ ಹೊಸಮನೆಯನ್ನು ನೋಡಿದ ವಿವರ ಹೇಳುತ್ತಾ ಆತ ತನ್ನ ಅಪ್ಪ ಎಂದಾಗ ಮೇಘಾಳಿಗೂ ಅಚ್ಚರಿಯಾಗುತ್ತದೆ. ಪೂರ್ವಿಯು ತಾನು ಅನುಭವಿಸುತ್ತಾ ಇರುವ ಸಂಕಟ ಕುರಿತು ತಿಳಿಸುತ್ತಾಳೆ. ಮೇಘಾ ಈ ಕೂಡಲೇ ಅಪ್ಪ(ಮಿತ್ರ)ನ ಮನೆಗೆ ಬಾ ಇನ್ನೊಂದು ಪವಾಡವಿದೆ ಎನ್ನುತ್ತಾಳೆ.
*
ಮಿತ್ರನ ಮನೆಯಲ್ಲಿ ಪ್ರಭುದೇವನನ್ನು ಕಂಡು ಪೂರ್ವಿಗೆ ಅಚ್ಚರಿ. ಮೇಘಾ ಮತ್ತು ಕಲ್ಯಾಣಿಯು ಪ್ರಭುವನ್ನ ಅಂಜಲಿಯೇ ಕರೆದು ತಂದಿದ್ದಾಳೆ ಎನ್ನುತ್ತಾರೆ. ಅಂಜಲಿ ತನ್ನ ಅಪ್ಪನಿಗೆ ಅವನ ಮೂರನೇ ಹೆಂಡತಿ ಮೋಸ ಮಾಡಿದ್ದಾಳೆ. ಅವನೀಗ ಮಗುವಾಗಿದ್ದಾನೆ ಎನ್ನುತ್ತಾಳೆ. ಇನ್ನು ಈ ಮಗುವನ್ನು ನೋಡಿಕೊಳ್ಳುವವಳು ನಾನು ಎನ್ನುತ್ತಾಳೆ. ಆಗಲೇ ಮಿತ್ರ ಎಲ್ಲಿ ಎಂದು ಹುಡುಕುವ ಸೋದರಿಯರಿಗೆ ಆತ ಯಾರೋ ಗೆಳೆಯರನ್ನು ನೋಡ ಹೋಗಿದ್ದಾರೆ ಎಮದು ತಿಳಿಸುವ ಅನುಸೂಯ. ಮಿತ್ರ ಅವರಿಗಾಗಿ ಕೊಟ್ಟಿರುವ ಕವರ್ರನ್ನು ನೀಡುತ್ತಾಳೆ. ಆ ಕವರ್ರಿನಲ್ಲಿರುವ ಸಿಡಿಯನ್ನು ನೋಡಿ ಎಲ್ಲರೂ ಅಚ್ಚರಿ ಪಡುತ್ತಲೇ ಅದನ್ನು ಪ್ಲೇಯರ್ಗೆ ಹಾಕುತ್ತಾರೆ. ಮಿತ್ರ ತಾನು ಬೆಳೆಸಿದ ಹಕ್ಕಿಗಳ ಜೊತೆಗೆ ಮಾತಾಡುತ್ತಾನೆ. ಮಿತ್ರ ತಾನು ತಂಬೂರಿಯಾದದ್ದು. ತನ್ನೊಂದಿಗೆ ಬೆಳೆದ ಹಕ್ಕಿಗಳೆಲ್ಲ ತಂತಿಯಾಗಿ ಶೃತಿ ಸೇರಿ ಸಂಗೀತವಾಗಿದ್ದನ್ನು ತಿಳಿಸುತ್ತಾನೆ. ಎಲ್ಲರೂ ಅಚ್ಚರಿಯಲ್ಲಿ ಉಳಿಯುತ್ತಾರೆ.
*
ಮಿತ್ರ ತನ್ನ ಮರದಲ್ಲಿ ಬೆಳೆದ ಹಕ್ಕಿಗಳು ಹಾರುವುದನ್ನು ಕಲಿತಿವೆ. ಅವುಗಳಿಗೆ ತನ್ನ ಅಗತ್ಯವಿಲ್ಲವೆಂದು ತಾನು ಅಗತ್ಯ ಇರುವ ಹೊಸ ಹಕ್ಕಿಗಳನ್ನು ಹುಡುಕಿ ಹೊರಟಿದ್ದೇನೆ ಎನ್ನುತ್ತಾನೆ. ನಾಲ್ವರು ಅಕ್ಕ-ತಂಗಿಯರು ಮಾತಾಡದ ಸ್ಥಿತಿ ತಲುಪುತ್ತಾರೆ. ಅವರ್ಯಾರೂ ತನ್ನನ್ನ ಹುಡುಕುವುದು ಬೇಡ ಎನ್ನುವ ಮಿತ್ರ ಅವರೆಲ್ಲರ ಜವಾಬ್ದಾರಿಗಳನು ನೆನಪಿಸುತ್ತಾನೆ. ಜೀವನದ ಕಡೆಯ ಹನಿಯವರಗೆ ಬದುಕಿ ಎಂದು ಹರಸುತ್ತಾನೆ. ಸೋದರಿಯರು ಕೊರಗುತ್ತಾ ತಮ್ಮ ತಮ್ಮ ಕೆಲಸಗಳಿಗೆ ಹೊರಟಾಗ ಕಲ್ಯಾಣಿಯು ಮಿತ್ರನಿಗಾಗಿ ಕೊರಗುತ್ತಾಳೆ.
ನಾಲ್ವರು ಪುಟ್ಟ ಹೆಣ್ಣುಮಕ್ಕಳಿಗಾಗಿ ವಚನ ಹೇಳಿಕೊಡುತ್ತಾ ದೂರಕ್ಕೆ ಸಾಗುವ ಮಿತ್ರ ಕ್ಯಾಮೆರಾಗೆ ಕಾಣುತ್ತಾನೆ.
ನಾಕುತಂತಿಯ ನಿರ್ದೇಶಕರು ಕ್ಯಾಮೆರಾದ ಎದುರಿಗೆ ಕಾಣಿಸಿಕೊಂಡು ನಾಕುತಂತಿಯನ್ನು ಆರುವರ್ಷಗಳ ಕಾಲ ಸಲಹಿದ ಬಂಧುಗಳಿಗೆ ನಮಸ್ಕಾರ ಹೇಳುತ್ತಾರೆ ಮತ್ತು ಕೆಲವು ದಿನಗಳ ವಿರಾಮದ ನಂತರ ನಮ್ಮ ತಂಡ ಹೊಸಕತೆಯೊಡನೆ ನಿಮ್ಮೆದುರಿಗೆ ಬರಲಿದ ಎಂದು ತಿಳಿಸುತ್ತಾರೆ.
* * *
ಇಲ್ಲಿಗೆ ’ನಾಕುತಂತಿ’ಯ ಪ್ರಯಾಣ ಮುಗಿಯುತ್ತದೆ.
೨೦೦೪ರ ಮಾರ್ಚಿ ತಿಂಗಳ ೨೭ನೇ ತಾರೀಖು ಆರಂಭವಾದ ಈ ಪ್ರಯಾಣ ೨೦೦೯ರ ಜೂನ್ ೧೨ಕ್ಕೆ ಮುಗಿಯುತ್ತಿದೆ.
ನಾಕುತಂತಿಯ ಎಲ್ಲಾ ಅಭಿಮಾನಿಗಳಿಗೆ ಈ ಕತೆಯನ್ನು ಬರೆದು ನಿರ್ದೇಶಿಸಿದ ಬಿ.ಸುರೇಶ ಹಾಗೂ ’ನಾಕುತಂತಿ’ ತಂಡದ ನಮನಗಳು.